ಹುಳಿಯಾರು: ಬ್ಯಾಂಕುಗಳಲ್ಲಿ ಯಾವುದೇ ಸಾಲ ಸೌಲಭ್ಯ ಪಡೆಯಬೇಕಾದರೆ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತವೆ, ಹಾಗಾಗಿ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿಸಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಂದೀಕೆರೆ ಶಾಖೆಯ ವ್ಯವಸ್ಥಾಪಕರಾದ ಆರ್.ತಿಪ್ಪೇಸ್ವಾಮಿ ತಿಳಿಸಿದರು.
ತಿಮ್ಮನಹಳ್ಳಿಯ ಸತ್ಯ ಸಂಜೀವಿನಿ ಒಕ್ಕೂಟ ಹಾಗೂ ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ತಿಮ್ಮನಹಳ್ಳಿಯಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ಜನ ಸುರಕ್ಷಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ನೂರು ಸ್ವಸಹಾಯ ಸಂಘಗಳಿದ್ದು ಆ ಸಂಘದ ಸದಸ್ಯರ ಜೊತೆಗೆ ಅವರ ಕುಟುಂಬದವರನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಯೋಜನೆಗಳಾದ ಜನ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ಬ್ಯಾಂಕುಗಳ ಮುಖಾಂತರ ನೋಂದಾಯಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸತ್ಯ ಸಂಜೀವಿನಿ ಒಕ್ಕೂಟದ ಸಂಪನ್ಮೂಲ ವ್ಯಕ್ತಿ ಶಾಮಲಾ ಮಾತನಾಡಿ ಕೇವಲ ವಾರ್ಷಿಕ ರೂ.20 ಹಾಗೂ ರೂ.436 ಹಣ ಪಾವತಿಸಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ನೋಂದಾಯಿಸಿ ಮರಣ ಹೊಂದಿದಲ್ಲಿ ಎರಡು ಲಕ್ಷಗಳ ವಿಮಾ ಮೊತ್ತ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಸತ್ಯ ಸಂಜೀವಿನಿ ಒಕ್ಕೂಟದ ಎಂಬಿಕೆ ಉಮಾದೇವಿ ಹಾಗೂ ಅಧ್ಯಕ್ಷರಾದ ಕಮಲಮ್ಮ ಮುಂತಾದವರು ಮಾತನಾಡಿ ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯದ ಜೊತೆಗೆ ವಿಮಾ ಸ್ವೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸತ್ಯ ಸಂಜೀವಿನಿ ಒಕ್ಕೂಟದ ಸದಸ್ಯರು, ಬಡಕೆಗುಡ್ಲು, ಮೈಲುಕಬ್ಬೆ, ತಿಮ್ಮನಹಳ್ಳಿ ಸ್ವಸಹಾಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.