ಹುಳಿಯಾರು :ಯಾವುದೇ ಹಬ್ಬಗಳ ಆಚರಣೆ ಸಮಯದಲ್ಲಿ ಸಮಸ್ಯೆಯಾಗಬಾರದು. ಹಬ್ಬಗಳನ್ನು ಸಂತೋಷದಿಂದ ಆಚರಿಸಬೇಕೆ ಹೊರತು ಸಂಕಟದಿಂದ ಅಲ್ಲ ಎಂದು ಪಿಎಸ್ಐ ಧರ್ಮಾಂಜಿ ತಿಳಿ ಹೇಳಿದರು.
ಹುಳಿಯಾರಿನ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹುಳಿಯಾರಿನಲ್ಲಿ ಮುಂಚಿನಿಂದಲೂ ಶಾಂತಿ ಪರಿಪಾಲನೆ ಆಗುತ್ತಿದ್ದು ಯಾವುದೇ ಸಮಸ್ಯೆಗೆ ಅವಕಾಶ ಕೊಡದಂತೆ ಎಲ್ಲರೂ ಸಹಕರಿಸಬೇಕು. ಮುಸ್ಲಿಂ ಸಮುದಾಯಕ್ಕೆ ಸೇರಿದ ದೊಡ್ಡ ಮಸೀದಿ, ಗಣಪತಿ ದೇವಸ್ಥಾನ, ಈಶ್ವರನ ದೇವಸ್ಥಾನ,ವೀರಭದ್ರ ಸ್ವಾಮಿ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಈ ಎಲ್ಲಾ ದೇವಾಲಯಗಳು ಕೇವಲ 30 ಮೀಟರ್ ಅಂತರದಲ್ಲೇ ಇದ್ದು ಎಲ್ಲರೂ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿರುವುದು ಸಂತಸದ ವಿಚಾರ ಎಂದರು.
ಹಬ್ಬಗಳ ಆಚರಣೆ ಸಮಯದಲ್ಲಿ ಕೆಲವೊಮ್ಮೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಲ್ಲಿ, ಅದನ್ನು ಸಮಾಜದ ಹಿರಿಯರು ಬಗೆಹರಿಸಲು ಮುಂದಾಗಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬೀಗಡಾಯಿಸಲು ಮುಂದಾಗಬಾರದು ಎಂದು ಮನವಿ ಮಾಡಿದರು.
ಪ್ರತಿಯೊಂದು ಸಮುದಾಯದವರು ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಬೇಕೆಂಬುದು ಇಲಾಖೆಯ ಆಶಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು, ಸಮಾಜಘಾತಕ ಶಕ್ತಿಗಳ ಬಗ್ಗೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಹಬ್ಬಗಳ ಮೆರವಣಿಗೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ, ಸಂಚಾರಕ್ಕೆ ಅಡೆಚಣೆಯಾಗದಂತೆ ನಡೆದುಕೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಮಿಯ ಮಸೀದಿ ಮುತುವಲ್ಲಿ ಆರಿಫ್ ಉಲ್ಲಾಖಾನ್, ಮದೀನಾ ಮಸೀದಿಯ ಸಾಧತ್, ಅಮಾನುಲ್ಲಾ, ವೈಎಸ್ ಪಾಳ್ಯದ ಚಾಂದ್ ಪಾಷಾ ,ಗಾಣದಾಳು ಜಹೀರ್, ಯಳನಾಡಿನ ರಫೀಕ್,ಬಳ್ಳೆಕಟ್ಟೆಯ ಶಫೀಕ್, ಕಂಪನಹಳ್ಳಿ ಭಾಷಾ ಸಾಬ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಕಾರ್ಯದರ್ಶಿ ಹೂವಿನ ಬಸವರಾಜು ಇಂದಿರಾನಗರದ ಬೆಂಕಿ ಗಣಪತಿ ದೇವಸ್ಥಾನದ ಕಾರ್ಯದರ್ಶಿ ಅರುಣ್ ರಾಜ್ ಸೇರಿದಂತೆ ನೂರಾನಿ ಹಾಗೂ ಬಿಲಾಲ್ ಮಸೀದಿಯ ಮುಖ್ಯಸ್ಥರು, ಪಟ್ಟಣದ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮತ್ತು ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.